ಪಕ್ಷದ ವರಿಷ್ಠರ ಕೆಂಗಣ್ಣಿಗೆ ಗುರಿಯಾಗಿ ಕೊನೆಗೆ ತಮ್ಮ ರಾಗಬದಲಿಸಿ ಹೇಳಿಕೆ ನೀಡುವ ಮೂಲಕ ಭಿನ್ನಮತ ಶನನಕ್ಕೆ ಮುಂದಾಗಿದ್ದ ಸಚಿವ ಕೆ.ಎಸ್.ಈಶ್ವರಪ್ಪ ಗುರುವಾರ ಮತ್ತೆ ಸಿಎಂ ಹಾಗೂ ಬಿಜೆಪಿ ವಿರುದ್ಧ ಗುಡುಗಿದ್ದಾರೆ.ಇಂದು ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಚುನಾವಣೆಯಲ್ಲಿ ನೀತಿ ಸಂಹಿತೆಯನ್ನು ಸರಿಯಾಗಿ ಅನುಸರಿಸಿಲ್ಲ ಎಂದು ಪುನರುಚ್ಚರಿಸಿರುವ ಮೂಲಕ ಮತ್ತೆ ದ್ವಂದ್ವ ಹೇಳಿಕೆಯನ್ನು ನೀಡಿದರು. ಕುಟುಂಬ ರಾಜಕಾರಣದ ವಿರುದ್ಧ ಟೀಕಿಸುತ್ತಿದ್ದ ನಮಗೆ ಈಗ ವಿಪಕ್ಷಗಳನ್ನು ಟೀಕಿಸುವ ನೈತಿಕ ಹಕ್ಕಿಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದರು.ರಾಜ್ಯದಲ್ಲಿ ಉದಾಸಿ ಅವರೆಲ್ಲ ತಮ್ಮ ಕುಟುಂಬ ರಾಜಕಾರಣಕ್ಕೆ ಒತ್ತು ಕೊಟ್ಟಿರಲಿ, ಆದರೆ ಮುಖ್ಯಮಂತ್ರಿಯಾಗಿ ಯಡಿಯೂರಪ್ಪನವರು ಕುಟುಂಬ ರಾಜಕಾರಣ ಮಾಡದೇ ಉಳಿದವರಿಗೆ ಮಾದರಿಯಾಗಬೇಕಿತ್ತು ಎಂದ ಈಶ್ವರಪ್ಪ, ಈ ಎಲ್ಲಾ ಅಂಶಗಳನ್ನು ವೈಚಾರಿಕವಾಗಿ ಚರ್ಚಿಸಬೇಕೆ ವಿನಃ, ವೈಯಕ್ತಿಕ ನೆಲೆಯಲ್ಲಿ ಗೊಂದಲಕ್ಕೆ ಆಸ್ಪದ ಮಾಡಿಕೊಳ್ಳಬಾರದು ಎಂದು ಈ ಸಂದರ್ಭದಲ್ಲಿ ಹೇಳಿದರು.ಆದರೆ ನನ್ನ ಹಾಗೂ ಮುಖ್ಯಮಂತ್ರಿ ನಡುವೆ ಯಾವುದೇ ಅಸಮಾಧಾನ ಇಲ್ಲ ಎಂಬ ಇಬ್ಬಗೆಯ ಹೇಳಿಕೆ ನೀಡಿದ ಅವರು, ಇದು ನನ್ನೊಬ್ಬನ ಅಸಮಧಾನ ಅಲ್ಲ, ಕಾರ್ಯಕರ್ತರ ಅಸಮಧಾನ ಎಂದರು.ಲೋಕಸಭಾ ಚುನಾವಣೆಯಲ್ಲಿ ಬಿಜೆಪಿ ಹಣ, ಹೆಂಡ ಹಂಚಿ ಗೆಲುವು ಸಾಧಿಸಿದೆ ಎಂಬ ಹೇಳಿಕೆ ನೀಡಿ, ಬಿಜೆಪಿ ಹಾಗೂ ಯಡಿಯೂರಪ್ಪ ವಿರುದ್ಧ ಬಹಿರಂಗವಾಗಿ ಕೆಂಡಕಾರಿದ್ದರು. ಈ ವಿಷಯ ಪಕ್ಷದ ಹೈಕಮಾಂಡ್ವರೆಗೂ ತಲುಪಿ, ಪಕ್ಷದ ವರಿಷ್ಠರು ಈಶ್ವರಪ್ಪಗೆ ತರಾಟೆ ತೆಗೆದುಕೊಂಡಿದ್ದ ಪರಿಣಾಮ ಬುಧವಾರ ನವದೆಹಲಿಯಲ್ಲಿ ತರಾತುರಿಯಲ್ಲಿ ಸುದ್ದಿಗೋಷ್ಠಿ ಕರೆದು, ತಾನು ಹಾಗೇ ಹೇಳಿಯೇ ಇಲ್ಲ, ನನ್ನ ಹೇಳಿಕೆಯನ್ನು ತಿರುಚಲಾಗಿತ್ತು. ಪ್ರತಿಪಕ್ಷಗಳು ನನ್ನ ಹೇಳಿಕೆಯನ್ನು ದುರುಪಯೋಗಪಡಿಸಿಕೊಳ್ಳುತ್ತಿವೆ ಎಂದು ಉಲ್ಟಾ ಹೊಡೆದಿದ್ದರು. ಆದರೆ ಇದೀಗ ಏಕಾಏಕಿ ಮತ್ತೆ ಪಕ್ಷದ ವಿರುದ್ಧ ಗುಡುಗಿದ್ದಾರೆ! |