ನಾನು ರಾಜ್ಯದ ಅತ್ಯಂತ ಹಿರಿಯ ಕಾಂಗ್ರೆಸಿಗರಲ್ಲೊಬ್ಬನಾಗಿದ್ದು, 1971ರಲ್ಲೇ ರಾಜ್ಯ ಯುವ ಕಾಂಗ್ರೆಸ್ ಅಧ್ಯಕ್ಷನಾಗಿ ಕಾರ್ಯ ನಿರ್ವಹಿಸಿದ್ದೆ ಎಂದು ಹೇಳುವ ಮೂಲಕ ಕೆಪಿಸಿಸಿ ಅಧ್ಯಕ್ಷ ಆರ್.ವಿ.ದೇಶಪಾಂಡೆ ಅವರು ತಾನು 'ವಲಸಿಗ' ಅಲ್ಲ ಎಂಬ ಬಗ್ಗೆ ಸ್ಪಷ್ಟನೆ ನೀಡಿದ್ದಾರೆ.
ಪಕ್ಷದ ಕೆಲವು ಕಾರ್ಯಕರ್ತರು ಹೇಳುವಂತೆ 'ವಲಸಿಗ' ಎಂಬ ಹಣೆಪಟ್ಟಿ ಕಟ್ಟಿಕೊಳ್ಳಲು ನಿರಾಕರಿಸಿದ ಅವರು, ಪಕ್ಷದೊಳಗೆ 'ಮೂಲ ಮತ್ತು ವಲಸಿಗ' ಕಾಂಗ್ರೆಸಿಗರ ಮಧ್ಯೆ ತಿಕ್ಕಾಟವಿದೆ ಎಂಬ ವರದಿಗಳಿಗೆ ಪ್ರತಿಕ್ರಿಯಿಸುತ್ತಾ, ಇಂಥದ್ದೆಲ್ಲಾ ಪ್ರಜಾಸತ್ತಾತ್ಮಕ ಸಂಘಟನೆಗಳಲ್ಲಿ ಸಾಮಾನ್ಯ ಎಂದರು.
ಎಲ್ಲ ನೇಮಕಾತಿಗಳನ್ನು ಮಾತುಕತೆಗಳ ಬಳಿಕವೇ ಹೈಕಮಾಂಡ್ ನಡೆಸುತ್ತದೆ ಮತ್ತು ಅದು ಮಾಡುವ ಯಾವುದೇ ಬದಲಾವಣೆಗಳಿಗೆ ಬದ್ಧವಿರಲು ತಾನು ಸಿದ್ಧ ಎಂದು ದೇಶಪಾಂಡೆ ಸ್ಪಷ್ಟಪಡಿಸಿದರು. |